ಎತ್ತ ಸಾಗಿದೆ ನಮ್ಮ ನಾಡು
ಚೆಲುವ ಕನ್ನಡ ನಾಡು
ಎತ್ತೆತ್ತಲೋ ಸಾಗಿದೆ ಭವ್ಯ ಬೀಡು |
ಚಿತ್ತ ಹರಿಸುವವರಿಲ್ಲ; ಇತ್ತ ಸುಳಿವೂ ಇಲ್ಲ
ಬೆಟ್ಟಗುಡ್ಡ, ನದಿ, ಅಡವಿ ಭರಿದು ಮಾಡಿದರೆಲ್ಲ
ಇಂಚಿಂಚೂ ಬಿಡದೆ ನುಂಗುವರಲ್ಲ
ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||
ವಾಯುವ್ಯಕೆ ಗೋವಾ; ಉತ್ತರದಿ ಮಹಾರಾಷ್ಟ್ರ
ಪೂರ್ವದಲಿ ಆಂಧ್ರ; ದಕ್ಷಿಣಕೆ ಕೇರಳ-ತಮಿಳುನಾಡು
ಚಿಂತೆಯಿಲ್ಲ ಸುತ್ತುವರೆದರೂ ಇಂತಿಪ್ಪ ಅನ್ಯರು |
ಚಿಂತೆಯೊಂದೆ.. ನಮಗೀಗ ನಮ್ಮೊಳಗೆ ನಮ್ಮವರು
ನುಂಗುವರು ಎಲ್ಲವನೂ ಬಾಕಸೂರರಂತೆ
ಒಂದಗುಳು ಬಿಡದೆ ಬಡಿದು ಬಾಯಿಗೆ ಹಾಕಿಕೊಂಡು
ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||
ಹೋರಾಡುವರು ಕಿರುಚಾಡುವರು
ಗಡಿ ರಾಜ್ಯದಿ ಊರುಗಳೆಲ್ಲಾ ನಮಗೆ ಸೇರಬೇಕೆಂದೆನುತ
ನಾಡನು ರಕ್ಷಿಸಲೆಂದು ಸಂ ಕಟ್ಟಿ ನಿಂತವರು |
ಇತ್ತ ಗಮನಿಸುವುದಿಲ್ಲ ರೈತರ, ಬಡವರ
ಭೂಮಿ ಕಿತ್ತು ನುಂಗುವರನ್ನ.. ಏಕೆಂದರೆ
ನುಂಗುವರು ನಮ್ಮವರು ತಾನೇ? ಅಣ್ಣ-ತಮ್ಮಂದಿರು
ಎತ್ತ ಸಾಗಿದೆ ನಾ ಕಾಣೆ... ನನ್ನವ್ವನ ಆಣೆ ||
ಹೋರಾಡಿದರು ಆಗಿನವರು ಏಕೀಕರಣಕೆ
ಕರ್ನಾಟಕ ಒಂದುಗೂಡಲೆಂದು
ಹೋರಾಡುವರು ಈಗಿನವರು ವರ್ಗೀಕರಣಕೆ
ಕರ್ನಾಟಕ ಯಾವುದೆಂದು |
ಸುಮ್ಮನೆ ಸತ್ತಂತಿರುವವರು ಪ್ರಜಾಪಾಲಕರು
ಯಾಕಪ್ಪಾ ಬೇಕು? ನಾಡಿನ ಚಿಂತೆ
ಬೇಕೊಂದೆ ಅವರುಗಳಿಗೆ ಅಸೆಂಬ್ಲಿ ಸಂತೆ
ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||
ದೋಚುತಿರುವರು ನಾಡನು ಕೊಳ್ಳೆ ಹೊಡೆದು
ಇವರ ದಾಹ ತಣಿಯುವುದಿಲ್ಲ
ತಿದ್ದುವರಿಲ್ಲ; ಚಾಟಿಯ ಬೀಸುವವರಿಲ್ಲ |
ಲೇಖನಿಲಿ ಚುಚ್ಚಿ ಕೊಲೆಗೈಯಬೇಕು ಇಂಥವರನು
ಅದಕ್ಕಾಗಿ ಮತ್ತೊಮ್ಮೆ ಹುಟ್ಟಿಬರಬೇಕು
ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ ಮಾಸ್ತರರು
ಎತ್ತ ಸಾಗಿದೆ ಅವ್ವ ಭುವನಮಾತೆ.. ನೀನೆಲ್ಲಿರುವೆಯೋ ನಾ ಕಾಣೆ ||
ರಚನೆ : ಅವಿನಾಶ್ (ಅವಿಕನ್ನಡಿಗ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ